ಗುರುದಾಸಪುರ
ಪಂಜಾಬಿನ ಒಂದು ಜಿಲ್ಲೆ; ಆ ಜಿಲ್ಲೆಯ ಕೇಂದ್ರ. ಜಿಲ್ಲೆಯ ವಿಸ್ತೀರ್ಣ 1,846 ಚ.ಮೈ.; ಜನಸಂಖ್ಯೆ 12,19,962 (1971). ಜಿಲ್ಲೆಯ ಉತ್ತರಕ್ಕೆ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ದಕ್ಷಿಣದಲ್ಲಿ ಅಮೃತಸರ ಜಿಲ್ಲೆ, ಪೂರ್ವಕ್ಕೆ ಕಾಂಗಡಾ ಮತ್ತು ಹೋಶಿಯಾರ್‍ಪುರ ಜಿಲ್ಲೆ ಮತ್ತು ಪಶ್ಚಿಮಕ್ಕೆ ಅಮೃತಸರ ಮತ್ತು ಸಿಯಾಲ್‍ಕೋಟ್ (ಪಾಕಿಸ್ತಾನ) ಜಿಲ್ಲೆಗಳಿವೆ. ವಾರ್ಷಿಕ ಸರಾಸರಿ ಮಳೆ 40''. ಇಲ್ಲಿಯದು ಸಮಶೀತೋಷ್ಣ ವಾಯುಗುಣ. ಈ ಜಿಲ್ಲೆಯಲ್ಲಿ ಹರಿಯುವ ರಾವೀ ಮತ್ತು ಬಿಯಾಸ್ ನದಿಗಳು ಅನೇಕ ಸಲ ಮೇರೆ ಮೀರಿ ಹರಿಯುತ್ತವೆ. ಈ ನದಿಗಳ ಮೇಲೆ ದೋಣಿ ಸಂಚಾರವುಂಟು. 

	ಜನರು ವ್ಯಾಪಾರ, ಮತ್ತು ಕೃಷಿಯಲ್ಲೂ ಖಾಸಗಿ ಮತ್ತು ಸರ್ಕಾರಿ ಕೆಲಸಗಳಲ್ಲೂ ನಿರತರಾಗಿದ್ದಾರೆ. ಧಾರಿವಾಲ್ ಮತ್ತು ಸುಜಾನ್‍ಪುರಗಳಲ್ಲಿ ಉಣ್ಣೆ, ಜಮಖಾನೆ ಮತ್ತು ದೃಷಿಯಂತ್ರಗಳ ಕಾರ್ಖಾನೆಗಳುಂಟು. ಬಟಾಲಾ ವ್ಯಾಪಾರ ಕೇಂದ್ರ. 

	ರಾವೀ ನದಿಯ ದಂಡೆಯ ಮೇಲೆ ಮುಕ್ತೇಶ್ವರದಲ್ಲಿ ಪ್ರಾಚೀನ ಕಾಲದ ಕೆಲವು ಶಿಲ್ಪಕಲಾಕೃತಿಗಳಿವೆ. ಬಟಾಲಾ, ಶಾಹಪುರ ಐತಿಹಾಸಿಕ ಪ್ರಾಮುಖ್ಯ ಪಡೆದಿವೆ. ಪಠಾಣಕೋಟ್‍ನಲ್ಲಿ ಪೂರ್ವದಲ್ಲಿ ಹಿಂದೂಗಳ ರಾಜ್ಯವಿತ್ತು. ಸೂರ್ ವಂಶದವರಿಂದ ಈ ಭಾಗವನ್ನು ಅಕ್ಬರ್ ಗೆದ್ದುಕೊಂಡ. ಈ ಭಾಗದಲ್ಲಿ ಸಿಕ್ಖರ ಮತ್ತು ಮೊಗಲರ ನಡುವೆ ಅನೇಕ ಯುದ್ಧಗಳು ನಡೆದುವು. ಅದೀನಾ ಬೇಗ್ ಈ ಭಾಗದ ಸುಭೇದಾರನಾಗಿದ್ದ. ಅವನ ಅನಂತರ ಸಿಕ್ಖರ ವರ್ಚಸ್ಸು ಹೆಚ್ಚಾಯಿತು. 1841ರಲ್ಲಿ ಇಡೀ ಜಿಲ್ಲೆ ಇಂಗ್ಲಿಷರ ಆಡಳಿತಕ್ಕೊಳಪಟ್ಟಿತು. 

	ಗುರುದಾಸಪುರ ನಗರ ಉ.ಅ. 32ಲಿ 63' ಮತ್ತು ಪೂ.ರೇ. 75ಲಿ25' ಮೇಲೆ ಇದೆ. ಜನಸಂಖ್ಯೆ 32,014 (1971). ಇಲ್ಲಿ ಸಾರಸ್ವತ ಬ್ರಾಹ್ಮಣರ ಒಂದು ಮಠವಿದೆ. ಇಲ್ಲಿಯ ಕೋಟೆಯನ್ನು ಬಂದಾ (ಸಿಕ್ಖರ 11ನೆಯ ಗುರು) ಕಟ್ಟಿಸಿದ. ಆ ಕೋಟೆಯನ್ನು ಮೊಗಲರು ವಶಪಡಿಸಿಕೊಳ್ಳಲು ಹೆಚ್ಚಿನ ಶ್ರಮ ವಹಿಸಬೇಕಾಯಿತು. ಆ ಕೋಟೆಯ ರಕ್ಷಣೆಗಾಗಿ ಬಂದಾ ಬಹದ್ದೂರ್ ಅತ್ಯಂತ ಸಾಹಸದಿಂದ ಹೋರಾಟ ನಡೆಸಿದ. ಮೊಗಲರ ಚಕ್ರವರ್ತಿ ಬಹದ್ದೂರ್ ಷಹನ ನಿಧನದ ಅನಂತರ ಬಂದಾ ಮತ್ತು ಅವನ ಶಿಷ್ಯರು ತಾವು ಅಡಗಿಕೊಂಡಿದ್ದ ಸ್ಥಳದಿಂದ ಹೊರಬಂದು, ಕೈಬಿಟ್ಟು ಹೋದ ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡು, ಸರ್‍ಹಿಂದ್ ಪ್ರಾಂತ್ಯವನ್ನು ಲೂಟಿ ಮಾಡಿದರು. ಆದರೆ 1715ರಲ್ಲಿ ಮೊಗಲರು ಗುರುದಾಸಪುರ ಕೋಟೆಗೆ ಮುತ್ತಿಗೆ ಹಾಕಿದರು. ಆಗ ಅಲ್ಲಿದ್ದ ಸಿಕ್ಖರು ಬಂದಾನ ನೇತೃತ್ವದಲ್ಲಿ ತೀವ್ರವಾದ ಹೋರಾಟ ನಡೆಸಿ, ಆ ಕೋಟೆಯನ್ನು ರಕ್ಷಿಸಲು ಪ್ರಯತ್ನಪಟ್ಟರು. ಧೈರ್ಯದಿಂದ ಹೋರಾಡಿದರೂ ಪ್ರಯೋಜನವಾಗದೆ ಬಂದಾ ಮತ್ತು ಅವನ ಅನುಯಾಯಿಗಳು ಶರಣಾಗತರಾದರು. ಬಂದಾ ಮತ್ತು ಅವನ ಮಗನನ್ನು ಮೊಗಲರು ಕ್ರೂರವಾಗಿ ಕೊಲ್ಲಿಸಿದರು. ಸಿಕ್ಖರ ಪ್ರಾಬಲ್ಯ ಕಡಿಮೆಯಾಯಿತು. 				(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ